ಬೆಂಗಳೂರು: ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸುವ ‘ಗ್ರಾಮ ಒನ್’ ಯೋಜನೆ ಮೊದಲ ಹಂತದಲ್ಲಿ 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.ಮಾರ್ಚ್ ಅಂತ್ಯದೊಳಗೆ ಈ ಯೋಜನೆಯನ್ನು ಉಳಿದ ಎಲ್ಲ ಜಿಲ್ಲೆಗಳಿಗೂ
ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.‘ಕಂದಾಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಧಾರ್, ರೇಷನ್ ಕಾರ್ಡ್ ಮತ್ತಿತರ ಸೇವೆಗಳನ್ನು ಗ್ರಾಮಮಟ್ಟದಲ್ಲಿಯೇ ಲಭ್ಯವಾಗಿಸುವ ಚಿಂತನೆಯಿಂದ ಈ ಯೋಜನೆ ಆರಂಭಿಸಲಾಗಿದೆ. ಸೇವೆಗಳ ಪೂರೈಕೆಯನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಈ ಎಲ್ಲ ಸೇವೆಗಳನ್ನು ಗ್ರಾಮಮಟ್ಟದಲ್ಲಿ ಒದಗಿಸಲಾಗುವುದು. ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ‘ಗ್ರಾಮ ಒನ್’ ಸೇವಾ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆದುಕೊಳ್ಳಬಹುದು. ಆ ಮೂಲಕ, ಜನರು ಸಮಯ ಹಾಗೂ ಹಣ ವ್ಯಯ ಮಾಡುವುದು ತಪ್ಪಲಿದೆ’ ಎಂದರು. ಜನರಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಕ್ರಾಂತಿಕಾರಿ ಬದಲಾವಣೆ ಇದು. ಸರ್ಕಾರದ ಸೇವೆಗಳನ್ನು ತಳಮಟ್ಟದಲ್ಲಿ ಸಮರ್ಪಕವಾಗಿ ಮತ್ತು ಸುಲಭವಾಗಿ ತಲುಪಿಸಲಾಗುವುದು.‘ಸಚಿವರು, ಶಾಸಕರು, ಜನಪ್ರತಿನಿಧಿಗಳು ಗ್ರಾಮ ಒನ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.ಮನೆ, ಭೂಮಿಯ ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ–ಹೀಗೆ ಹಲವು ಸೇವೆಗಳನ್ನು ‘ಗ್ರಾಮ ಒನ್’ ಯೋಜನೆಯ ಮೂಲಕ ಜನರು ಪಡೆದುಕೊಳ್ಳಬಹುದು. ಸೇವಾ
ಸಿಂಧು ಕಾರ್ಯಕ್ರಮದ ಎಲ್ಲಾ ಸೇವೆಗಳು, ಸಕಾಲ ಸೇವೆಗಳು, ಸಿಎಂಆರ್ಎಫ್ ಸೇವೆಗಳು, ಮೈಕ್ರೊ ಬ್ಯಾಂಕಿಂಗ್ ಸೇವೆಗಳು, ಆಧಾರ್ ತಿದ್ದುಪಡಿ ಸೇವೆಗಳು ಲಭ್ಯ. ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳ 3,026 ಗ್ರಾಮ ಒನ್ ಸೇವಾ ಕೇಂದ್ರಗಳು ಆರಂಭವಾಗಿದೆ. ಈ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತವೆ. ದಕ್ಷಿಣ ಕನ್ನಡ ಸೇರಿ ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ಆರಂಭವಾಗಲಿದೆ.