ಬೆಂಗಳೂರು: ರಾಜ್ಯದಾದ್ಯಂತ ಜನವರಿ 31 ರಿಂದ ರಾತ್ರಿ ಕರ್ಪ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಕೋವಿಡ್-19ರ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು ಚಿತ್ರಮಂದಿರ, ಈಜುಕೊಳ, ಜಿಮ್ ಶೇಕಡಾ 50ರ ನಿಯಮ ಮುಂದುವರಿಕೆಗೆ ತೀರ್ಮಾನಿಸಲಾಗಿದೆ. ದೇವಾಲಯಗಳಲ್ಲಿ ಎಲ್ಲ ಧಾರ್ಮಿಕ ಸೇವೆಗಳಿಗೆ ಅನುಮತಿ
ನೀಡಲಾಗಿದೆ. ಜಾತ್ರೆಗಳು, ಧರಣಿ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.ಸಾರಿಗೆ ವಾಹನಗಳಲ್ಲಿ ಆಸನ ಶೇ 100 ಭರ್ತಿಗೆ ಅನುಮತಿ. ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಶೇ 100ರರಷ್ಟು ಅನುಮತಿ. ಸಿನಿಮಾ, ಮಲ್ಟಿಪ್ಲೆಕ್ಸ್ಗಳಲ್ಲಿ ಶೇ 50ರಷ್ಟು ಅನುಮತಿ. ಮದುವೆಗಳಿಗೆ ಇನ್ನು ಮುಂದೆ ಹೊರಾಂಗಣದಲ್ಲಿ 300 ( ಈಗ 200 ಇದೆ), ಒಳಾಗಣದಲ್ಲಿ 200 (ಈಗ 100) ಮಂದಿಗೆ ಅವಕಾಶ.ಎಲ್ಲ ಕಚೇರಿಗಳಲ್ಲಿ ಶೇ 100 ಹಾಜರಾತಿ. ಧಾರ್ಮಿಕ ಸ್ಥಳಗಳಲ್ಲಿ ಎಲ್ಲ ಸೇವೆಗಳಿಗೆ (ಅರ್ಚನೆ, ಮಂಗಳಾರಾತಿ) ಅನುಮತಿ. ಆದರೆ, ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶ. ಎಲ್ಲ ಜಾತ್ರೆಗಳು, ರ್ಯಾಲಿಗಳು, ಧರಣಿ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ. ಈಜುಕೊಳ, ಜಿಮ್ಗಳಲ್ಲಿ ಶೇ 50 ಅನುಮತಿ. ಕ್ರೀಡಾ ಕಾಂಪ್ಲೆಕ್ಸ್, ಕ್ರೀಡಾಂಗಣಗಳಲ್ಲಿ ಶೇ 50 ಅವಕಾಶ. ಮಹಾರಾಷ್ಟ್ರ, ಕೇರಳದಿಂದ
ಬರುವವರಿಗೆ ಆರ್ಟಿಪಿಸಿಆರ್ ತಪಾಸಣೆ ವರದಿ ಕಡ್ಡಾಯ. ಬೆಂಗಳೂರಿನಲ್ಲಿ ಶಾಲೆಗಲ್ಲಿ ಎಲ್ಲ ತರಗತಿಗಳು ಸೋಮವಾರದಿಂದ ಆರಂಭ. ಕೋವಿಡ್ ಪತ್ತೆಯಾದರೆ ಅಂಥ ತರಗತಿಯನ್ನು ಮಾತ್ರ ಮುಚ್ಚಲಾಗುವುದು. ಇಡೀ ಶಾಲೆಯಲ್ಲಿ ಎಷ್ಟು ಮಂದಿಗೆ ಕೋವಿಡ್ ದೃಢಪಟ್ಟಿದೆ ಎನ್ನುವುದನ್ನು ಆಧರಿಸಿ ಅಂಥ ಶಾಲೆಯನ್ನು ಎಷ್ಟು ದಿನ ಮುಚ್ಚಬೇಕು ಎಂದು ಆಯಾ ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.